*🌻ದಿನಕ್ಕೊಂದು ಕಥೆ🌻 ಮಮಕಾರ*
ನಗರದ ಪ್ರತಿಷ್ಠಿತ ಚಿನ್ನ ಬೆಳ್ಳಿ ವ್ಯಾಪಾರಿ,ಕೇಶವ ಮೂರ್ತಿ ತನ್ನ ಸಂಬಂಧಿಕರ ಪೈಕಿ
ಮಾಧವಿಯ ಕೈ ಹಿಡಿದು ಒಂದು ದಶಕ ಉರುಳಿದರೂ ಅವರಿಗೆ ಸಂತಾನ ಭಾಗ್ಯ ಪ್ರಾಪ್ತಿ ಆಗಿರಲಿಲ್ಲ.ಹಾಗಂತ ಅವರೇನು ಪರಸ್ಪರರನ್ನು ದೂಷಿಸುತ್ತ ಕಾಲ ಕಳೆಯಲಿಲ್ಲ.ಬದಲಿಗೆ ಈ ವಿಷಯ ಕ್ಕೆ ಸಂಬಂಧಿಸಿದಂತೆ ಪತಿ ಪತ್ನಿ ಯರು ಗಹನವಾಗಿ ಯೋಚಿಸಿದ ನಂತರ, ಮಾಧವಿ ನೀಡಿದ ಸಲಹೆಯಂತೆ ಅವರು ಒಂದು ಹೆಣ್ಣು ಮಗುವನ್ನು ದತ್ತು ತೆಗೆದುಕೊಳ್ಳಬೇಕೆಂಬ ನಿರ್ಧಾರ ಕ್ಕೆ ಬಂದಿದ್ದರು.ಇವರು ಕೈಕೊಂಡ ನಿರ್ಧಾರಕ್ಕೆ ಹತ್ತಿರದ ಬಂಧು ಬಳಗದವರಿಂದ ಅಪಸ್ವರ ಕೇಳಿ ಬಂದಿತ್ತಾದರೂ ಅದಕ್ಕೆ ಸೊಪ್ಪು ಹಾಕದೇ ತಾವು ನಿಶ್ಚಯಿಸಿದಂತೆ ಮಾಧವಿಯ ಕಡೆ ದೂರದ ಸಂಬಂಧಿಗಳ ಪೈಕಿ ಅನಾಥೆ ಯಾದ ಪರಿಮಳ ಳನ್ನು ಕಾನೂನನ್ವಯ ಎಲ್ಲ ವಿಧಿ ವಿಧಾನಗಳನ್ನು ಕ್ರಮವಾಗಿ ಅನುಸರಿಸಿ , ಒಂದು ಶುಭ ಮುಹೂರ್ತದಲ್ಲಿ ಆಕೆಯನ್ನು ದತ್ತು ಪಡೆದು ಮನೆಗೆ ಕರೆದು ತಂದಿದ್ದರು.ಮೂರು ವರ್ಷದ ಪುಟ್ಟ ಪರಿಮಳ ನೋಡಲು ಎಷ್ಟು ಮುದ್ದಾಗಿದ್ದಳೋ ಅಷ್ಟೇ ಚೂಟಿ ಕೂಡ ಆಗಿದ್ದಳು.
ಕೆಳ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದು ಬಂದ ಬಾಲೆ, ಅತ್ಯಾಧುನಿಕ ಮಾಧವಿ ಯ ಮನೆಗೆ ಕಾಲಿಟ್ಟಾಗ ಎಲ್ಲವನ್ನು ಬೆರಗು ಕಣ್ಣುಗಳಿಂದ ನೋಡುತ್ತ
ಶುರುವಿನಲ್ಲಿ ಆತಂಕದಲ್ಲಿದ್ದಳು.ಬರಬರುತ್ತ ಮಾಧವಿ ತಾಯಿಯ ಪ್ರೀತಿ,ಮಮಕಾರ ಧಾರೆಎರೆಯಲು ಆರಂಭಿಸಿದ ಬಳಿಕ ಮುಂದಿನ ಆರೇಳು ತಿಂಗಳು ಗಳಲ್ಲಿ ಹೊಸ ಪರಿಸರಕ್ಕೆ ಹೊಂದಿಕೊಂಡು, ಮೂರು ಹೊತ್ತು ಮಾಧವಿಯ ಹಿಂದೆ "ಅಮ್ಮಾ.. ಅಮ್ಮಾ.."ಎಂದು ಓಡಾಡತೊಡಗಿದಾಗ ಮಾಧವಿ ಅವ್ಯಕ್ತ ಆನಂದ ಅನುಭವಿಸಲಾರಂಭಿಸಿದಳು.ಹಾಗೆಯೇ ಮಾಧವಿ ಹೇಳಿ ಕೊಟ್ಟಂತೆ ಆಕೆಯ ಪತಿಗೆ"ಅಪ್ಪಾ..ಅಪ್ಪಾ.."ಎಂದು ಕೂಗುವುದನ್ನು ರೂಢಿಸಿಕೊಂಡಳು.
ಪರಿಮಳ ಅವರ ಮನೆಗೆ ಬಂದು ಒಂದು ವರ್ಷ ಕಳೆದಿತ್ತು ಅಷ್ಟೇ.ಆಗ ವಿಚಿತ್ರವೋ
ಪವಾಡವೋ ಅಥವಾ ವಿಧಿಯ ಆಟವೋ ಎಂಬಂತೆ ಮಾಧವಿ ಚೊಚ್ಚಲು ಗರ್ಭಿಣಿ ಯಾಗಿದ್ದಳು.ತಾನು ತಾಯಿ ಆಗುತ್ತಿರುವ ವಿಚಾರ ಅವಳಲ್ಲಿನ ಸಂಭ್ರಮ ಇನ್ನೂ ಹೆಚ್ಚಾಗಿಸಿತ್ತು.ಆಗಾಗ ಆಕೆ ಪರಿಮಳಳಿಗೆ "ಪುಟ್ಟೀ... ನಿನ್ನ ಜೊತೆ ಆಡೋಕೆ ಪುಟ್ಟ ಬರತ್ತೆ"ಎಂದು ಕೇಳಿದಾಗ ಅದು ಖುಷಿ ಆಶ್ಚರ್ಯ ದಿಂದ ನಲಿದಾಡಿ ತನ್ನ ಸಂತೋಷ ವ್ಯಕ್ತಪಡಿಸುತ್ತಿದ್ದಳು.ದಿನಗಳು ಉರುಳಿದ ಬಳಿಕ ಮಾಧವಿ ಒಂದು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದಾಗ ಎಲ್ಲರಿಗೂ ಖುಷಿಯಲ್ಲಿ ಮಿಂದೆದ್ದಿದ್ದರು.ಪರಿಮಳಳಂತೂ ಶಾಲೆಯ ಅವಧಿ ಹೊರತು ಪಡಿಸಿ ಉಳಿದೆಲ್ಲ ವೇಳೆಯನ್ನು ಪುಟ್ಟ ಪಾಪು ನಿನ್ನೊಂದಿಗೆ ಆಟ ಆಡುತ್ತ ಕಾಲ ಕಳೆಯುತ್ತಿದ್ದಳು.
ಆ ಮಗುವಿಗೆ ಒಂದು ಶುಭ ಮುಹೂರ್ತದಲ್ಲಿ "ನಿಶಾಂತ್"ಎಂದು ನಾಮಕರಣ
ಮಾಡಿ ಮುಗಿಸಿದ್ದರು.
ಮಾಧವಿ ಮತ್ತು ಕೇಶವಮೂರ್ತಿ ಯವರ ಬದುಕಿನ ಹಡಗು ಈ ರೀತಿ ನಿಶ್ಚಿಂತೆಯಿಂದ ಸಾಗುತ್ತಿದ್ದಾಗ ಅನಿರೀಕ್ಷಿತವಾಗಿ ಬಿರುಗಾಳಿಗೆ ಸಿಲುಕಿ, ಒಂದು ದೊಡ್ಡ ಬಂಡೆಗೆ ಅಪ್ಪಳಿಸಿದಂತೆ ಒಂದು ದಿನ ಸಂಜೆ ಕೇಶವ ಮೂರ್ತಿ ಅಂಗಡಿ ಯಿಂದ ಮನೆಗೆ ಬಂದವ ತೀವ್ರ ಎದೆನೋವು ಎಂದು ನರಳಲು ಆರಂಭಿಸಿದ. ತಡಮಾಡದೇ ಮಾಧವಿ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ, ನುರಿತ ವೈದ್ಯರಿಂದ ಚಿಕಿತ್ಸೆ ಕೊಡಿಸಿದರೂ ಆತ ಬದುಕಿ ಉಳಿಯಲಿಲ್ಲ.ಪತಿಯನ್ನು ಕಳೆದುಕೊಂಡ ಮಾಧವಿ ಯ ಜಂಘಾಬಲವೇ ಉಡುಗಿ ಹೋದಂತಾಗಿತ್ತು. ಕಾಲ ಎಲ್ಲವನ್ನೂ ಸರಿಪಡಿಸುತ್ತದೆ ಎನ್ನುವಂತೆ ತನ್ನ ಎರಡೂ ಕಂದಮ್ಮಗಳ ಲಾಲನೆ ಪಾಲನೆಯಲ್ಲಿ ತೊಡಗಿದರೂ ಆಗಾಗ ಪತಿಯ ಅಗಲುವಿಕೆಯ ದು:ಖ ನೆನಪಿಸಿಕೊಂಡು ಮೌನದಿಂದ ಕಣ್ಣೀರಿಡುತ್ತಿದ್ದಳು.
ಕಾಲ ಸರಿದಂತೆ ಮಾಧವಿಯ ಮಕ್ಕಳಿಬ್ಬರೂ ಶಾಲೆಗೆ ಹೋಗಲಾರಂಭಿಸಿದರು
ಮಾಧವಿ ಐದನೇ ತರಗತಿಯಲ್ಲಿ ದ್ದಾರೆ ನಿಶಾಂತ್ ಒಂದನೇ ತರಗತಿಯಲ್ಲಿ ಓದುತ್ತಿದ್ದ.ಓದಿನ ವಿಚಾರದಲ್ಲಿ ಪರಿಮಳ ಇಡೀ ತರಗತಿಯಲ್ಲಿ ಮೊದಲನೇಯ ಸ್ಥಾನದಲ್ಲಿದ್ದಾರೆ ನಿಶಾಂತ್ ಅಷ್ಟೊಂದು ಚುರುಕಾಗಿರಲಿಲ್ಲ ಇದರಿಂದ ಸಹಜವಾಗಿ ಪರಿಮಳ ಎಲ್ಲರ ಹೊಗಳಿಕೆಗೆ ಪಾತ್ರಳಾಗಿದ್ದಳು .ಈ ವಿಷಯ ಪುಟ್ಟ ನಿಶಾಂತ್ ನ
ಕಿವಿಗೆ ಬಿದ್ದಾಗಲೆಲ್ಲ ಆತ ಆಂತರ್ಯದಲ್ಲಿ ಅಸಮಾಧಾನ ಪಡತೊಡಗುತ್ತಿದ್ದ.
ಮಾಧವಿ ಗೆ ನಿಶಾಂತ್ ನೂ ಓದಿನಲ್ಲಿ ಮುಂದೆ ಬರಲಿ ಎಂಬ ಇರಾದೆ ಯಿಂದ
ಆತನಿಗಾಗಿ ಖಾಸಗಿ ಶಿಕ್ಷರನ್ನು ನೇಮಿಸಿ ಕೊಂಡಿದ್ದಳು.ಆದರೆ ಅದೇಕೋ ಆತ ಓದಿನ ಕಡೆ ನಿರೀಕ್ಷಿತ ಗಮನ ನೀಡದಾದಾಗ ಮಾಧವಿ ಗೆ ಒಂದು ಬಗೆಯ ಚಿಂತೆ ಕಾಡತೊಡಗಿತು.ಈ ಕುರಿತು ಪರಿಮಳಳ ಎದುರು ತೋಡಿಕೊಂಡು "ನೀನಾದರೂ
ಅವನಿಗೆ ಬುದ್ಧಿ ಹೇಳಮ್ಮಾ"ಎಂದು ಕೇಳಿದಾಗ ಆಕೆ ಅಮ್ಮನ ಮಾತಿಗೆ ಬೆಲೆ ಕೊಟ್ಟು ವಿದ್ಯೆಯ ಮಹತ್ವ ದ ಬಗ್ಗೆ ಆತನಿಗೆ ತಿಳುವಳಿಕೆ ನೀಡಿದರೂ ಅದೇನು ಪ್ರಯೋಜನ ವಾಗಲಿಲ್ಲ.ನಿಶಾಂತ್ ಬೆಳೆಯುತ್ತ ಹೋದಂತೆ ಸಹವಾಸದ ದೋಷದಿಂದಲೋ
ಏನೋ ಮನೆಯವರೊಂದಿಗೆ ಒರಟಾಗಿ ವರ್ತಿಸಲಾರಂಭಿಸಿದ.ಜವಾಬ್ದಾರಿ ಹೆಗಲಿಗೇರಿದಾಗ ಸರಿ ಹೋದಾನು ಎಂದು ಅಂದು ಕೊಂಡ ಮಾಧವಿ ಆತನಿಗೆ ಹೆಚ್ಚು ಹೇಳುವುದನ್ನು ಕಡಿಮೆ ಮಾಡಿದಳು.ಇದೇ ಅವನಿಗೆ ಒಂದು ರೀತಿಯ ಪ್ಲಸ್ ಪಾಯಿಂಟ್ ಆದಂತಾಯ್ತು.
ಓದಿನಲ್ಲಿ ಮುಂದಿದ್ದ ಪರಿಮಳ ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದು
ಅದೇ ಊರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಲು ಆರಂಭಿಸಿದಳು.ಇತ್ತ ನಿಶಾಂತ್ ಕಾಲೇಜು ಓದನ್ನು ಅರ್ಧಕ್ಕೆ ನಿಲ್ಲಿಸಿ, ಯಾವುದೋ
ವ್ಯಾಪಾರ ಮಾಡುತ್ತೇನೆ ಎಂದು ಮಾಧವಿ ಯಿಂದ ಹಣ ಕೀಳಲಾರಂಭಿಸಿದ.
ಈತನ ಈ ಹವ್ಯಾಸ ಅಪಾಯಕಾರಿ ಮಟ್ಟ ಮುಟ್ಟುವುದೆಂದರಿತ ಮಾಧವಿ
ತಾಯಿ ಯಾಗಿ ಆತನ ಒಳ್ಳೆಯದಕ್ಕೆ ಸ್ವಲ್ಪ ಕಟುವಾಗಿ ಮಾತನಾಡಿದ್ದಕ್ಕೆ ಅಂದು
ಆತ ತನ್ನ ತಾಯಿ ಎಂದೂ ನೋಡದೇ ತುಂಬ ತುಚ್ಛವಾಗಿ ಮಾತನಾಡಿದ.ಅಷ್ಟೇ ಅಲ್ಲದೇ ಮಾತು ಮಾತಿಗೆ ಪರಿಮಳಳ ವಿಷಯ ಎಳೆದು ತಂದು ರಾದ್ಧಾಂತ ಮಾಡಿದ. ಈ ನಡುವೆ ಪರಿಮಳಳಿಗೆ ಬೇರೆ ಊರಿಗೆ ವರ್ಗವಾಗಿದ್ದು ಮಾಧವಿ ಗೆ
ಬೇಸರದ ವಿಷಯ ವಾಗಿದ್ದರೆ ಈತನಿಗೆ ಇನ್ನು ತನಗಾರೂ ಅಡ್ಡಿಪಡಿಸಲ್ಲ ಎಂಬ ಧೋರಣೆ ತಲೆ ಹೊಕ್ಕಿತ್ತು.
ಮಾಧವಿ ಬೇರೆ ಊರಿಗೆ ಹೋಗಿ ಎರಡು ವರ್ಷಗಳ ನಂತರ ಆಕೆಗೆ ಕಂಕಣ ಬಲ ಕೂಡಿ ಬಂದಿದ್ದರಿಂದ ಸರ್ಕಾರದ ಇಲಾಖೆಯೊಂದರಲ್ಲಿ ಅಧಿಕಾರಿಯಾಗಿದ್ದ ಶ್ರೀಪತಿ ಯೊಂದಿಗೆ ಮದುವೆ ಮಾಡಿ ಮಾಧವಿ ಆ ಒಂದು ಜವಾಬ್ದಾರಿ ಯಿಂದ ಮುಕ್ತ ಳಾಗಿದ್ದಳು.ಎರಡು ವರ್ಷದ ನಂತರ ಪರಿಮಳ ತಾನಿದ್ದ ಊರಲ್ಲಿ ಹೊಸ ಮನೆಕಟ್ಟಿಸಿಕೊಂಡಾಗಲಂತೂ ಮಾಧವಿಗೆ ಹಿಡಿಸಲಾರದಷ್ಟು ಸಂತೋಷ ವಾಗಿತ್ತು.
ಇತ್ತ ನಿಶಾಂತ್ ದಿನೇ ದಿನೇ ಚಟದ ದಾಸನಾಗಿ ಕಣ್ಮುಂದೆ ಹಾಳಾಗಿ ಹೋಗುತ್ತಿರುವುದನ್ನು ಕಂಡು ಒಳ ಒಳಗೇ ಗಂಭೀರ ವಾಗಿ ಚಂತಿಸಲಾರಂಭಿಸಿದಳು.ಇದರಿಂದ ಆಕೆಯ ಆರೋಗ್ಯ ಮೊದಲಿಗಿಂತ ಕ್ಷೀಣಿಸಲಾರಂಭಿಸಿತು. ವಿಷಯ ಅರಿತ ನಂತರ ಪರಿಮಳ ತನ್ನ ತಾಯಿಯನ್ನು
ಕರೆದು ಕೊಂಡು ಹೋಗಿ ಸೂಕ್ತ ಚಿಕಿತ್ಸೆ ನೀಡೀದಳು.ಒಂದೆರಡು ತಿಂಗಳ ಬಳಿಕ ಮಾಧವಿ ಆರೋಗ್ಯ ಚೇತರಿಸಿದ ನಂತರ ತನ್ನ ಊರಿಗೆ ವಾಪಸ್ ಬಂದಳು.ಅಷ್ಟರೊಳಗೆ ಆಕೆಯ ಅನುಪಸ್ಥಿತಿಯಲ್ಲಿ ನಿಶಾಂತ್ ಹಣ ಹಾಗೂ ಆರೋಗ್ಯ ಕೆಡಿಸಿಕೊಂಡಿದ್ದ. ಯಾವಾಗಲೂ ತಾಯಿಗೆ ಹಣಕ್ಕಾಗಿ ಪೀಡಿಸುವುದೇ ಆಗಿತ್ತು.ಕಂಡಕಂಡವರಲ್ಲಿ ಸಾಲು ಸೋಲ ಮಾಡಿ ಕೊನೆಗೆ ತಾಯಿಗೆ ಹೆದರಿಸಿ ಬೆದರಿಸಿ ಮನೆ ಹರಾಜು ಹಾಕುವ ಮಟ್ಟಕ್ಕೆ ತಂದಿಟ್ಟಿದ್ದ. ನೀನು ಮಾಡುತ್ತಿರುವುದು ತಪ್ಪು ಎಂದು ಹೆಳಿದ್ದಕ್ಕೆ ಆ ದಿನ ನಿನ್ನಿಷ್ಟ ಬೇಕಿದ್ರೆ ಇರು ಇಲ್ಲಾಂದ್ರೆ ಹೊರಟು ಹೋಗು ಎಂದು ಹುಚ್ಚಾಪಟ್ಟೆ ರೆಗಾಡಿದ್ದ.ಈ ವಿಷಯ ಮಗಳಿಗೆ ಹೇಳಿದರೆ ಮಗ ಇನ್ನೇನು ಮಾಡುತ್ತಾನೋ ಎಂಬ ಅಳುಕಿನಿಂದ ತುಟಿ ಪಿಟಕ್ಕೆನ್ನದೇ ಮೌನ ವಾಗಿ ಉಳಿದು ಗತಿಸಿದ ಪತಿಯ ಫೋಟೋ ಎದುರು ನಿಂತು ದು:ಖಿಸುವುದೇ ಆಗಿತ್ತು ಅವಳ ದಿನಚರಿ.ಮನಸ್ಸಿನಲ್ಲಿ ಮನೆ ಹರಾಜಿನ ವಿಷಯ ತಾಳದಾದಾಗ ಪರೋಕ್ಷವಾಗಿ ಇದನ್ನು ಮಗಳ ಗಮನಕ್ಕೆ ತಂದು ತಂದೆಯ ಮನೆಯನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳುವಂತೆ ಹೇಳಿದ್ದಳು.
ಮನೆಯ ಹರಾಜಿನ ದಿನವಂತೂ ಮಾಧವಿಗೆ ಎನೂ ತೋಚದೇ ಜ್ವರ ಬಂದಂತಾಗಿತ್ತು.ಹರಾಜುದಾರರು ಬಂದು ಕೊನೆಯ ಬಿಡ್ಡು ಕೂಗು ವೇಳೆ ಸರಿಯಾಗಿ ಪತಿಯೊಂದಿಗೆ ಬಂದ ಪರಿಮಳ ತಾನೇ ಕೂಗಿ ಅಂತೂ ಅದನ್ನು ತನ್ನದಾಗಿಸಿಕೊಂಡು, ತಮ್ಮನನ್ನು ಕೂಗಿ ಇನ್ನು ಮುಂದೆ ಯಾವ ಕಾರಣಕ್ಕೂ ಅಮ್ಮ ನಿನ್ನೊಂದಿಗೆ ಇಲ್ಲಿರಲ್ಲ ನನ್ನೊಂದಿಗೆ ಇರುತ್ತಾಳೆ ಎಂದು ಕಠೋರವಾಗಿ ನುಡಿದು, ನೀನು ಸರಿದಾರಿಗೆ ಬಂದ ದಿನವೇ ಈ ಮನೆ ನಿನಗೆ ಮಾಡಿಕೊಡುವೆ"ಎಂದು ಹೇಳಿ
ತಾಯಿಯ ಕೈ ಹಿಡಿದು ಬಾ.. ಅಮ್ಮಾ ಹೋಗೋಣ ಎಂದು ಕಾರಿನೊಳಗೆ ಕೂರಿಸಿಕೊಂಡು ಹೊರಟಾಗ ಅವಳಲ್ಲಿನ ಮಮಕಾರ ಕಂಡ ಮಾಧವಿಯ ಕಣ್ಣುಗಳು ತುಂಬಿ ಬಂದಿದ್ದವು.
ಕೃಪೆ:ಅರವಿಂದ.ಜಿ.ಜೋಷಿ.
ಸಂಗ್ರಹ:ವೀರೇಶ್ ಅರಸೀಕೆರೆ. From Facebook
.jpeg)







0 comments:
Post a Comment